ವಿಷ್ಣು ಸಹಸ್ರನಾಮವೇ ಯಾಕೆ?

*ವಿಷ್ಣು ಸಹಸ್ರನಾಮವೇ ಯಾಕೆ?*

ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ. ಬೃಹಸ್ಪತಿ ಆರಾಧನೆಯಿಂದ ಬ್ರಹ್ಮವರ್ಚಸ್ಸು, ಇಂದ್ರನ ಆರಾಧನೆಯಿಂದ ಇಂದ್ರಿಯ ಪಾಟವ, ದಕ್ಷಪ್ರಜಾಪತಿಗಳ ಆರಾಧನೆಯಿಂದ ಪ್ರಜಾಸಂಪತ್ತು, ಸತ್ಸಂತಾನ, ಮಹಾಲಕ್ಷ್ಮೀ ಉಪಾಸನೆಯಿಂದ ಐಶ್ವರ್ಯ, ಅಗ್ನಿಯಿಂದ ತೇಜಸ್ಸು, ವಸುಗಳಿಂದ ಸಂಪತ್ತು, ಅದಿತಿಯಿಂದ ಅನ್ನಾಹಾರ, ದೇವತೆಗಳಿಂದ ಸ್ವರ್ಗಪ್ರಾಪ್ತಿ, ವಿಶ್ವೇದೇವತೆಗಳಿಂದ ಭೂಸಂಪತ್ತು, ಅಶ್ವಿನಿದೇವತೆಗಳಿಂದ ಆಯುರ್ವೃದ್ಧಿ, ಗಂಧರ್ವರಿಂದ ಸ್ಪುರದ್ರೂಪ, ಸೌಂದರ್ಯ, ಊರ್ವಶಿಯಿಂದ ಸ್ತ್ರೀವಿಹಾರ, ಯಜ್ಞದಿಂದ ಕೀರ್ತಿ, ಈಶ್ವರನಿಂದ ವಿದ್ಯೆ ಹಾಗೂ ಒಳ್ಳೆಮನೋಭಾವ, ಗೌರೀಪೂಜೆಯಿಂದ ಅನ್ಯೋನ್ಯತೆ, ಸುಖದಾಂಪತ್ಯ, ಪಿತೃಗಳಿಂದ ಸಂತತಿ ವೃದ್ಧಿ ಹೀಗೆ ಒಬ್ಬೊಬ್ಬ ದೇವತೆಯಿಂದ ಒಂದೊಂದು ಸಿದ್ಧಿಯಾದರೆ, ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಈ ಎಲ್ಲ ಸಿದ್ಧಿಗಳೂ ಒಟ್ಟಿಗೆ ಸುಲಭವಾಗಿ ಲಭಿಸುವುದು.

*ಪಾರಾಯಣ ಎಂದರೆ…*

ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರು ಅದರಲ್ಲೇ ಪರಾಯಣರಾಗಿ ಪಾರಾಯಣ ಮಾಡಬೇಕು. ಪರಾಯಣ ಎಂದರೆ ಪರಮಾತ್ಮನಲ್ಲಿ ಮುಳುಗಿರಬೇಕು. ಅವನೇ ಮತಿ, ಅವನೇ ಗತಿ, ಪರಮಾನಂದ ಸ್ಥಿತಿ ಎಂಬ ಅನುಭವ ಬರಬೇಕು. ಸಾಮೂಹಿಕ ಪಾರಾಯಣ ಆಗುವಾಗ ಸಹಸ್ರನಾಮದಲ್ಲಿನ ನಾಮಮಂತ್ರ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸುತ್ತ ಹೃದಯದಲ್ಲಿ ದೈವಿಕ ಆನಂದದ ಅನುಭವ ತರುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಆನಂದ ದೊರಕುತ್ತದೆ. ಹಬ್ಬ, ವ್ರತ, ಉತ್ಸವಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಲಾಗುತ್ತದೆ. ಭೀಷ್ಮ ಏಕಾದಶಿ, ವೈಕುಂಠ ಏಕಾದಶಿ, ಪ್ರಥಮ ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು. ಪಾರಾಯಣ ಮಾಡುವಾಗ ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡಬೇಕು. ಸಾಮೂಹಿಕ ಅಥವಾ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹವಿರುತ್ತದೆ. ಆತ್ಮಸುಖ, ಯೋಗಕ್ಷೇಮ, ಭಾಗ್ಯಸೌಭಾಗ್ಯ, ಧೈರ್ಯ, ಆತ್ಮಸ್ಥೈರ್ಯ, ಸ್ಮರಣಶಕ್ತಿ, ಸ್ಪುರಣಶಕ್ತಿ, ಮೇಧಾಶಕ್ತಿ ಹಾಗೂ ಕೀರ್ತಿಗಳನ್ನು ತಂದುಕೊಡುತ್ತದೆ.

*ಸಾಡೇಸಾತ್- ಶನಿಕಾಟ*  -ವಿಷ್ಣುಸಹಸ್ರನಾಮದವರಿಗೆ ಇರುವುದಿಲ್ಲ. ಎಲ್ಲ ತಾಪತ್ರಯ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ ಪವಿತ್ರಸಹಸ್ರನಾಮವೆಂದೇ ಇದು ವಿಶಿಷ್ಟವಾಗಿದೆ.

*ಸ್ವರ ತರಂಗಗಳ ಪ್ರಭಾವ*

ಬೃಹತೀಸಹಸ್ರ ಶಾಸ್ತ್ರಗ್ರಂಥವು ಋಗ್ವೇದದ ಒಂದುಸಾವಿರ ಋಕ್ಗಳ ಒಂದು ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲಿಯೂ ಮೂವತ್ತಾರು ಸ್ವರಾಕ್ಷರ ಹಾಗೂ ಮೂವತ್ತಾರು ವ್ಯಂಜನಾಕ್ಷರ ಇರುತ್ತದೆ. ಎಂದರೆ ಪ್ರತಿಸ್ತೋತ್ರದಲ್ಲಿ 72 ಅಕ್ಷರಗಳು. ಒಂದುಸಾವಿರ ಸ್ತೋತ್ರಗಳಲ್ಲಿ

72 ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯೇಯವೇ ವಿಷ್ಣುಸಹಸ್ರನಾಮ ಸ್ತೋತ್ರ. ವಿಷ್ಣುಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ ನಾಡೀಶುದ್ಧಿ, ದೇಹಶುದ್ಧಿ, ಮನಶುದ್ಧಿ ಮಾಡುತ್ತದೆ.

*ಸಂವಿಧಾನ*

ಈ ಮಹಾಮಂತ್ರದ ದೈವ ಮಹಾವಿಷ್ಣು, ಇದನ್ನು ನೀಡಿದ ಋಷಿ ವೇದವ್ಯಾಸರು, ಇದರ ಛಂದಸ್ಸು ಅನುಷ್ಟುಪ್, ಈ ಮಂತ್ರದ ಬೀಜಭಾಗ ಅಮೃತಾಂಶೂದ್ಭವೋ ಭಾನುಃ ಸ್ತೋತ್ರ, ಈ ಮಂತ್ರದ ಮಹಾಶಕ್ತಿ ದೇವಕೀನಂದನಃ ಸ್ರಷ್ಟಾ ಸ್ತೋತ್ರ. ಇದರ ಪರಮಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ, ಈ ಮಂತ್ರದ ಅನಾವರಣ ಭಾಗ ಶಂಖಭೃತ್ ನಂದಕೀ ಚಕ್ರೀ ಸ್ತೋತ್ರ. ಈ ಮಂತ್ರದ ಅಸ್ತ್ರಭಾಗ ಶಾಂರ್šಧನ್ವಾ ಗದಾಧರಃ ಸ್ತೋತ್ರ, ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ ಇದರ ಕವಚ ಭಾಗ ತ್ರಿಸಾಮಾಸಾಮಗಸಾಮ. ಇಡೀ ಮಂತ್ರದ ಮೂಲಪ್ರೇರಣೆ ಆನಂದಂ ಪರಬ್ರಹ್ಮ.

ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ. ವಿಷ್ಣುವೇ ಜಗದೊಡೆಯ ಎಂಬುವುದೇ ಧ್ಯಾನ. ಇದರ ಪಠಣ, ಜಪ, ಪಾರಾಯಣವು ವಿಷ್ಣುಪ್ರೇರಣೆಯಿಂದಾಗಿದ್ದು, ಅದರಿಂದ ವಿಷ್ಣುಪ್ರೀತನಾಗಲಿ, ಎಂಬ ಭಾವನೆಯೇ ಇದರ ಪ್ರಯೋಜನ.

*ಸಕಲ ಪುರುಷಾರ್ಥ ಸಿದ್ಧಿ*

ಶರಪಂಜರದ ಮೇಲೆ ಮಲಗಿದ್ದು ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ಇಡೀ ಜಗತ್ತಿನ ದೈವ ಯಾವುದು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಂಸಾರಚಕ್ರದ ಬಂಧನದಿಂದ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ ಜಗತ್ಪ್ರಭುವೂ, ದೇವದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣುಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲ, ಅಂತಹವರು ನಿರಂತರವಾಗಿ ಪ್ರಗತಿಯ, ಅಭ್ಯುದಯದ, ಯಶಸ್ಸಿನ ಹಾದಿಯಲ್ಲಿ ಇರುತ್ತಾರೆ. ಮಂತ್ರದ್ರಷ್ಟ್ರಾರರಾದ ಋಷಿಮುನಿಗಳಿಂದ ಪರಿಪರಿಯಾಗಿ ಸ್ತುತಿಸಲ್ಪಟ್ಟ ಈ ವಿಷ್ಣುಸಹಸ್ರನಾಮದ ಪಾರಾಯಣದಿಂದ ಎಲ್ಲ ಪುರುಷಾರ್ಥಗಳೂ ಸಿದ್ಧಿಯಾಗುತ್ತವೆ.

ಜಪಗಳಲ್ಲಿ ಸರ್ವಶ್ರೇಷ್ಠ

*ವಿಷ್ಣುಸಹಸ್ರನಾಮದಲ್ಲಿ ‘ಧರ್ಮರಾಜ ಕಿಂ ಜಪನ್ ಮುಚ್ಯತೇ ಜಂತುಃ*

ಜನ್ಮಸಂಸಾರಬಂಧನಾತ್’ ಎಂದು ಕೇಳಿದ ಪ್ರಶ್ನೆಗೆ ಜಪಗಳಲ್ಲಿ ವಿಷ್ಣುಸಹಸ್ರನಾಮ ಜಪಶ್ರೇಷ್ಠ ಎಂದು ಭೀಷ್ಮರು ಉತ್ತರಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವಾಗ ನಾಮಮಂತ್ರ ತರಂಗಗಳು ಪರಿಸರ ಶುದ್ಧಿಮಾಡಿ, ಅಪೂರ್ವ ಸನ್ನಿಧಾನ ನಿರ್ಮಾಣ ಮಾಡುತ್ತವೆ.

*ಹನ್ನೊಂದರ ಮಹತ್ವ*

ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಮನನ, ಶೀಲ, ವಿನಯ, ವಿದ್ಯೆ, ನೆಮ್ಮದಿ, ಮನಶ್ಶಾಂತಿ ಇವಿಷ್ಟು ವಿಷ್ಣುಸಹಸ್ರನಾಮದ ಚಕ್ರದಿಂದ ಎಂದರೆ ಹನ್ನೊಂದು ದಿನ ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮ ಇಲ್ಲ. ವಿಷ್ಣುಸಹಸ್ರನಾಮ ಇದು, ಪವಿತ್ರಕ್ಕೆ ಪವಿತ್ರ, ಮಂಗಳಕ್ಕೆ ಮಂಗಳ, ಇದನ್ನು ಪಾರಾಯಣ ಮಾಡುವವರ ಮನೆ, ಮನ ಪಾವನವಾಗುತ್ತದೆ.

*ವಿಷ್ಣು ಸಹಸ್ರನಾಮ ಚಕ್ರ*

ಯಾರು ವಿಷ್ಣುಸಹಸ್ರನಾಮ ಹೇಳುವರೋ, ಕೇಳುವರೋ ಅಂತಹವರಿಗೆ ಇಹದಲ್ಲಿ, ಪರದಲ್ಲಿ ಎಂದಿಗೂ ಅಶುಭ, ಅಮಂಗಳವೆನ್ನುವುದೇ ಇಲ್ಲ. ಇದರ ಪಾರಾಯಣದಿಂದ ಯಶಸ್ಸು, ಶ್ರೇಯಸ್ಸು, ಲಭ್ಯ. ಎಲ್ಲ ತಾಪತ್ರಯ, ಭಯಗಳೂ ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಬಲ, ಸೌಂದರ್ಯ, ಹೆಚ್ಚುತ್ತದೆ. ಅಂತಃಕರಣ ಶುದ್ಧವಾಗುತ್ತದೆ. ಶ್ರದ್ಧೆ ಭಕ್ತಿಯಿಂದ ವಿಷ್ಣು ಸಹಸ್ರನಾಮಚಕ್ರ ಪೂರೈಸಿದವರು ಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃ, ಕೀರ್ತಿಗಳನ್ನು ಹೊಂದುತ್ತಾರೆ. ಶೀಘ್ರದಲ್ಲಿ ಎಲ್ಲ ನೋವು, ಸಂಕಟಗಳಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ, ಧ್ಯಾನ, ನೆಮ್ಮದಿ, ದಯೆ, ತ್ಯಾಗ ಪ್ರೇಮ ಅವರಿಗೆ ಲಭಿಸುತ್ತವೆ. ವಿಷ್ಣುಸಹಸ್ರನಾಮ ಸರ್ವಶಾಸ್ತ್ರಗಳ ಸಾರ, ಸಾರೋದ್ಧಾರ. ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳು. ಭಗವಂತನ ಸಾವಿರ ರೂಪಗಳ ಸಾವಿರನಾಮಗಳೇ ವಿಷ್ಣುಸಹಸ್ರನಾಮ. ಅದು ಬೃಹತೀಸಹಸ್ರದ ಸಾರ....

No comments:

Post a Comment